ಸಾರ್ಥಕ ಬದುಕನ್ನು ಸಾಧಿಸಬೇಕೆನ್ನುವವರಿಗೆ ಎದುರಾಗುವ ಎಲ್ಲಾ ಅಡೆತಡೆಗಳನ್ನು ಗೆದ್ದು ನಿಲ್ಲಲು ಸ್ಫೂರ್ತಿಯ ಸೆಲೆಯಾಗಿರುವ ಮಂಕುತಿಮ್ಮನ ಕಗ್ಗವನ್ನು ಈ ಕಾಲಘಟ್ಟದ ವಿಚಾರಗಳೊಂದಿಗೆ ಬೆರೆಸಿ ಅತ್ಯಂತ ಸುಲಭವಾದ ನಿರೂಪಣೆಯೊಂದಿಗೆ ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರು ಈ ಕೃತಿಯಲ್ಲಿ ನೀಡಿದ್ದಾರೆ. ಸಭೆಯಲ್ಲಿ ಭಾಷಣಕ್ಕೆಂದು ನಿಂತರೆ ಪುಂಕಾನುಪುಂಕವಾಗಿ ಕಗ್ಗದ ಸಾಲುಗಳನ್ನು ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ, ಲಯಬದ್ಧವಾಗಿ ಹಾಡಬಲ್ಲ ಕೊಂಡಳ್ಳಿಯವರ ಕಳೆದೆರೆಡು ದಶಕಗಳಿಂದ ಕಗ್ಗವನ್ನೇ ಅನುಕ್ಷಣ ಧ್ಯಾನಿಸಿದವರು. ಅತ್ಯಂತ ಕ್ರಿಯಾಶೀಲ ಕನ್ನಡ ಸಾಹಿತ್ಯದ ಪರಿಚಾರಕರಾಗಿರುವ ಕೊಂಡಳ್ಳಿಯವರು ಸಾಹಿತ್ಯಲೋಕದಲ್ಲಿ ಮೇರು ಪರ್ವತಕ್ಕೆ ಏರಲು ಬೇಕಿರುವ ಎಲ್ಲಾ ಅರ್ಹತೆಯನ್ನು ಸಮರ್ಥವಾಗಿ ಹೊಂದಿದವರು. ವಿಶೇಷವಾಗಿ ಕನ್ನಡ ಪುಸ್ತಕಲೋಕದಲ್ಲೇ ವಿನೂತನವಾಗಿ ಸಾಲುಗಳ ಆಡಿಯೋ ಲಿಂಕ್ನ್ನು ಸೇರಿಸಿ ಕಗ್ಗದ ಜೊತೆಗೆ ಅದರ ಭಾವಾರ್ಥವನ್ನು ನೀಡಿದ ಮೊಟ್ಟ ಮೊದಲ ಕೃತಿ ಇದು. ಓದುಗನಿಗೆ ಹಳೆಗನ್ನಡದ ಕಗ್ಗದ ಸಾಲು ಕಷ್ಟಕರವಾದರೆ ಅಲ್ಲೇ ನೀಡಿರುವ ಕ್ಯೂ ಆರ್ ಸ್ಕ್ಯಾನ್ ಮಾಡಿ ಪ್ರಭಾಕರ ಶೆಟ್ಟರ ಧ್ವನಿಯಲ್ಲೇ ಈ ಪದ್ಯವನ್ನು ಕೇಳಿಸಿಕೊಂಡು ಅದರ ಭಾವಾರ್ಥವನ್ನು ಸಂಭ್ರಮಿಸಬಹುದು.