ಬಾಬು ಕೃಷ್ಣಮೂರ್ತಿ (ಮೇ ೧೧, ೧೯೪೪) ಕನ್ನಡದ ಸುಪ್ರಸಿದ್ಧ ಬರಹಗಾರರು ಮತ್ತು ಪತ್ರಿಕಾ ಸಂಪಾದಕರು. ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ಣಮೂರ್ತಿಯವರ ‘ಅಜೇಯ’ ಕೃತಿ ನಮ್ಮ ಕಾಲದ ಪೀಳಿಗೆಗೆ ದೇಶ ಅಂದರೇನು, ದೇಶ ಭಕ್ತಿ ಅಂದರೇನು, ಸ್ವಾತಂತ್ರ್ಯ ಹೋರಾಟದ ನಿಜವಾದ ಅರ್ಥವೇನು ಇವನ್ನೆಲ್ಲಾ ಇನ್ನಿಲ್ಲದಂತೆ ಹೃದಯಕ್ಕೆ ಮೀಟಿದಂತಹ ಕೃತಿ.
ಸಾಹಿತ್ಯ, ಪತ್ರಿಕೋದ್ಯಮ, ಈ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾಗಿರುವ ಬಾಬು ಕೃಷ್ಣಮೂರ್ತಿಯವರು ಮೇ ೧೧, ೧೯೪೪ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ವೆಂಕಟೇಶ ಶಾಸ್ತ್ರಿಗಳು ಮತ್ತು ತಾಯಿ ಸೀತಮ್ಮನವರು. ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲೇ ನಡೆಸಿದ ಕೃಷ್ಣಮೂರ್ತಿಯವರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದರು.
ಸಾಹಿತ್ಯ ಮತ್ತು ಪತ್ರಿಕೋದ್ಯಮಗಳಲ್ಲಿ ಅತೀವ ಆಸಕ್ತರಾಗಿದ್ದ ಬಾಬು ಕೃಷ್ಣಮೂರ್ತಿಯವರು ಆಯ್ದುಕೊಂಡ ಕ್ಷೇತ್ರವೂ ಪತ್ರಿಕೋದ್ಯಮವೇ. ೧೯೬೮ರಿಂದ ೧೯೭೨ರವರೆಗೆ ಲೇಖನ ಕಾವೇರಿಯ ಸಹ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ನಂತರ ಸೇರಿದ್ದು ಕೊಟ್ಟಾಯಂನ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಸಂಪಾದಕರಾಗಿ. ಇವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ) ಮುಂತಾದ ನಿಯತಕಾಲಿಕೆಗಳು ಹೊರಬಂದುವು. ಕಳೆದ ಹಲವು ವರ್ಷಗಳಲ್ಲಿ ಅವರು ‘ಕರ್ಮವೀರ’ ಪತ್ರಿಕೆಯ ಸಂಪಾದಕರಾಗಿ ದುಡಿದಿದ್ದಾರೆ.