ಶಿವಾನಂದ ಕಳವೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಳವೆಯವರು. ಪ್ರಾಥಮಿಕ, ಪ್ರೌಢ ಶಿಕ್ಷಣದ ಮುಗಿಸಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದ ಶಿವಾನಂದ ಕಳವೆಯವರಿಗೆ ಬರವಣಿಗೆಯ ಹುಚ್ಚು ಹತ್ತಲಾರಂಭಿಸಿತ್ತು. ಪರಿಸರ ಸಂರಕ್ಷಣೆ ಕುರಿತು ಶಿವಾನಂದ ಕಳವೆಯವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರದಲ್ಲಿ ವಿವಿಧ ಶಿಬಿರಗಳನ್ನು ಏರ್ಪಡಿಸುತ್ತಾರೆ. ಕಾಡಿನಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಕ್ಟಿಕಲ್ ಪಾಠ ಮಾಡುತ್ತಾರೆ. ನೆಲ-ಜಲ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕಳವೆಯವರದ್ದು ದೊಡ್ಡ ಹೆಸರು. ಈಸ್ಟ್ ಇಂಡಿಯ ಕಂಪನಿಯ ನಿರ್ದೇಶನದಂತೆ ೧೮೦೧ರಲ್ಲಿ ಡಾ. ಪ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಅಧ್ಯಯನ ಪ್ರವಾಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ. ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ. ಇದರ ಮಹತ್ವ ಅರಿತ ಶಿವಾನಂದ ಕಳವೆಯವರು ೨೦೦೧ರಲ್ಲಿ ಬುಕಾನನ್ ತಿರುಗಿದ ಹಾದಿಯಲ್ಲಿ ಮರುಪ್ರವಾಸ ಮಾಡಿ ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’ ಕಾನ್ಮನೆ ಪರಿಸರ ಆಸಕ್ತರು, ಬರಹಗಾರರು ಒಮ್ಮೆಯಾದರೂ ಭೇಟಿಕೊಡಲೇಬೇಕಾದ ತಾಣ. ನಾಡಿನ ಉದ್ದಗಲ ಸಂಚರಿಸಿದ ಶಿವಾನಂದ ಕಳವೆಯವರು ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಅಂಕಣ ಬರೆದಿದ್ದಾರೆ. ಮುಡೇಬಳ್ಳಿ , ಮುಳ್ಳೆಹಣ್ಣು , ಬಹುಧಾನ್ಯ, ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ). ಶಿವಾನಂದ ಕಳವೆಯವರ ಕಾನ್ಮನೆ ಪತ್ರಕರ್ತರ, ಹವ್ಯಾಸಿ ಬರಹಗಾರರ ಪಾಲಿನ ಅಧ್ಯಯನ ಶಾಲೆಯೆಂದೇ ಪ್ರಸಿದ್ಧವಾಗಿದೆ. ‘ಗೌರಿ ಜಿಂಕೆ’ಯ ಕಾನ್ಮನೆಗೆ ಬಂದು ಕಳವೆಯವರ ಗೆಳೆತನ ಮಾಡಿದ್ದು ಈಗ ಇತಿಹಾಸ. ಗೌರಿಯ ನೆನಪಲ್ಲಿ ಬರೆದಿದ್ದಾರೆ ಗೌರಿ ಜಿಂಕೆಯ ಆತ್ಮಕಥೆ ಬರೆದಿದ್ದಾರೆ.
ಕಳವೆಯಲ್ಲಿ ನೀರಿಂಗಿಸುವ ಪ್ರಯೋಗಕ್ಕೆ ಕೈ ಹಾಕಿ ಯಶಸ್ವಿಯಾದ ಶಿವಾನಂದ ಕಳವೆಯವರು ತಮ್ಮ ಪ್ರಯತ್ನವನ್ನು ಬೇರೆಡೆಗೂ ವಿಸ್ತರಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಖಾಲಿ ಜಾಗದಲ್ಲಿ ನೀರಿಂಗಿಸುವ, ಕೆರೆ ಹೂಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಚಿತ್ರನಟ ಯಶ್ ಅವರ ಯಶೋಮಾರ್ಗಕ್ಕೆ ನೀರಿಂಗಿಸುವ ಕಾರ್ಯಕ್ರಮದ ಉಸ್ತುವಾರಿ ಹೊತ್ತರು. ಶಿವಾನಂದ ಕಳವೆಯವರ ನೀರಿಂಗಿಸುವ ಸಾಹಸದಿಂದ ಇಂದು ಎಷ್ಟೋ ಜನರ ನೆಲ ಹಸಿರಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ೨೦೦೬ ರಲ್ಲಿ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಸುವರ್ಣ ಸುದ್ದಿವಾಹಿನಿಯ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿದೆ. ಪತ್ರಕರ್ತರಿಗೆ ಪರಿಸರ ಕಾಳಜಿಯ ಪಾಠ ಹೇಳುವ ಶಿವಾನಂದ ಕಳವೆಯವರಿಗೆ ರಾಜ್ಯದ ವಿವಿಧ ಸಂಘಸಂಸ್ಥೆಗಳು ಪುರಸ್ಕರಿಸಿ ಗೌರವಿಸಿವೆ.