ಕನ್ನಡ ಸಾರಸ್ವತ ಲೋಕದಲ್ಲಿ ‘ಹಂಪನಾ’ ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಹಾಗೆಯೇ ಯುನೆಸ್ಕೋದವರು ೧೯೭೯ನೇ ವರ್ಷವನ್ನು ಅಂತರಾಷ್ಟ್ರೀಯ ಮಕ್ಕಳ ವರ್ಷವೆಂದು ಘೋಷಿಸಿದಾಗ ಶಿಶುಸಾಹಿತ್ಯದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ ಕೃಷ್ಣರಾಜ ಪರಿಷನ್ಮಂದಿರದ ಆವರಣದಲ್ಲಿ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ ತಲೆಯೆತ್ತಿತು.
ಹಂಪನಾ ಅವರು ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಗೇ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮುಂಬಯಿ ವಿಶ್ವವಿದ್ಯಾಲಯ, ಮದರಾಸು ವಿಶ್ವವಿದ್ಯಾಲಯ ಹಾಗೂ ಮಧುರೈ ವಿಶ್ವವಿದ್ಯಾಲಯಗಳ ಆಶ್ರಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.